ಮಾನವ ಪ್ರಾಣಿಯ ನಡುವಿನ ಸಂಬಂಧದ ಕಥೆಯನ್ನು ಸಾಕಷ್ಟು ಚಿತ್ರಗಳಲ್ಲಿ ಹೇಳಲಾಗಿದೆ. ಅಲ್ಲದೆ ಅಪ್ಪಟ ಗ್ರಾಮೀಣ ಸೊಗಡಿನ ಕಥೆ, ಭಾಷಾ ಶೈಲಿಯನ್ನಿಟ್ಟುಕೊಂಡು ಹಲವು ಚಿತ್ರಗಳು ತೆರೆಕಂಡಿವೆ, ಅವರೆಡನ್ನೂ ಸೇರಿಸಿ ನಿರ್ಮಾಣವಾಗಿರುವ ಚಿತ್ರ ಪಪ್ಪಿ ಈವಾರ ತೆರೆಕಂಡಿದೆ. ಆದರಿಲ್ಲಿ ಉತ್ತರ ಕರ್ನಾಟಕದ ಭಾಷಾ ಸೊಗಡಿನ ಜತೆಗೆ ಮಾನವ, ಶ್ವಾನದ ಸುತ್ತ ನಡೆಯುವ ಕಥೆಯನ್ನ ಪ್ರೇಕ್ಷಕರ ಮನಮುಟ್ಟುವ ಹಾಗೆ ತೆರೆಮೇಲೆ ತಂದಿದ್ದಾರೆ, ನಿರ್ದೇಶಕ ಆಯುಷ್ ಮಲ್ಲಿ. ಇಡೀ ಚಿತ್ರವನ್ನು ಮನರಂಜನಾತ್ಮಕವಾಗಿ ಅಷ್ಟೇ ಭಾವನಾತ್ಮಕವಾಗಿ ತೆರೆಯ ಮೇಲೆ ಕಟ್ಟಿಕೊಡುವ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ, ಅಪ್ಪಟ ಉತ್ತರ ಕರ್ನಾಟಕ ಭಾಷೆಯ ಈ ಸಿನಿಮಾ ಮನುಷ್ಯ-ನಾಯಿಯ ನಡುವಿನ ಪರಸ್ಪರ ಪ್ರೀತಿ, ವಿಶ್ವಾಸದ ಕಥೆಯನ್ನು ಹೇಳುತ್ತಾ ವಾಸ್ತವ ಸ್ಥಿತಿಗತಿಗಳನ್ನು ತೆರೆದಿಡುತ್ತದೆ.
ಹಳ್ಳಿಯಲ್ಲಿ ಬರಗಾಲ ಆವರಿಸಿದ ಕಾರಣದಿಂದ ಸಿಂಧನೂರು ತಾಲ್ಲೂಕಿನ ದಡೇಸುಗೂರಿನ ದುರುಗಪ್ಪ ಹಾಗೂ ರೇಣುಕಾ ದಂಪತಿ ತಮ್ಮ ಪುತ್ರ ಪರಶುರಾಮನ ಜತೆ ಕೆಲಸವನ್ನರಸಿ ದೂರದ ಬೆಂಗಳೂರು ಮಹಾನಗರಕ್ಕೆ ಬರುತ್ತಾರೆ.ಅವರ ಜೊತೆ ರೇಣುಕಾಳ ಸಹೋದರ ಕನಕಪ್ಪನೂ ಬರುತ್ತಾನೆ. ತಮ್ಮೂರಿನ ಮೇಸ್ತ್ರಿಯೊಬ್ಬನ ಬಳಿ ಕಟ್ಟಡ ಕಾರ್ಮಿಕರಾಗಿ ಕೂಲಿ ಕೆಲಸಕ್ಕೆ ಸೇರುತ್ತಾರೆ. ಉಳಿದುಕೊಳ್ಳಲು ಒಂದು ಗುಡಿಸಲು, ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಮೇಸ್ತಿçಯೇ ಶಿಕ್ಷಕಿಯನ್ನು ನೇಮಿಸಿರುತ್ತಾನೆ. ಮಗ ಪರಶುರಾಮನನ್ನು ದುರುಗಪ್ಪ ಇಲ್ಲಿಯೇ ಸೇರಿಸುತ್ತಾನೆ. ಪರಶುರಾಮ ಮನೆಯಲ್ಲಿ ಸ್ನೇಹಿತರ ಬಾಯಲ್ಲಿ ಪರ್ಶ್ಯಾ ಆಗೇ ಫೇಮಸ್. ಇಲ್ಲಿ ಪರ್ಶ್ಯಾನಿಗೆ ಆದಿ ಎಂಬ ಹುಡುಗ ಸ್ನೇಹಿತನಾಗುತ್ತಾನೆ. ಒಮ್ಮೆ ಪಪ್ಪಿ ಎಂಬ ನಾಯಿಮರಿ ಕಳೆದುಹೋಗಿದೆ, ಹುಡುಕಿಕೊಟ್ಟವರಿಗೆ ೧೦ ಸಾವಿರ ರೂ. ಬಹುಮಾನ ಎಂಬ ಜಾಹೀರಾತು ಈ ಹುಡುಗರಿಬ್ಬರ ಕಣ್ಣಿಗೆ ಬೀಳುತ್ತದೆ, ಇಲ್ಲೆಲ್ಲ ಪರ್ಶ್ಯಾ ಆದಿ ಇಬ್ಬರ ನಡುವಿನ ಡೈಲಾಗ್ಗಳು ಪ್ರೇಕ್ಷಕರಿಗೆ ಖುಷಿ ಕೊಡುತ್ತವೆ.
ಪಪ್ಪಿ ಚಿತ್ರದ ಮುಖ್ಯ ಕಥೆ ಪ್ರಾರಂಭವಾಗುವುದೇ ಇಲ್ಲಿಂದ, ಚಿತ್ರದ ಮೊದಲಾರ್ಧದಲ್ಲಿ ನಿರ್ದೇಶಕರು ಪ್ರೇಕ್ಷಕರಿಗೆ ಒಂದಷ್ಟ ವಿಷಯಗಳನ್ನು ವಿವರಿಸುವುದಕ್ಕಾಗಿಯೇ ಮೀಸಲಿಟ್ಟಿದ್ದಾರೆ. ಉತ್ತರಕರ್ನಾಟಕದ ಜನ ಬರಗಾಲದಿಂದ ತತ್ತರಿಸುವುದು, ಹೊಟ್ಟೆಪಾಡಿಗೆ ಕೆಲಸ ಅರಸಿ ಬೆಂಗಳೂರಿಗೆ ಬರುವುದು. ಮಹಾನಗರದೊಳಗೆ ಸಣ್ಣ ಗುಡಿಸಲುಗಳಲ್ಲಿ ಅವರು ಬದುಕು ಕಟ್ಟಿಕೊಳ್ಳುವುದು, ಅವರು ಕಾಣುವ ಸಣ್ಣ ಸಣ್ಣ ಕನಸುಗಳು, ಬದಲಾದ ಉತ್ತರ ಕರ್ನಾಟಕದ ಜನರ ಜೀವನ ಶೈಲಿ, ಪರ್ಶ್ಯಾ-ಆದಿಯ ನಡುವಿನ ಸ್ನೇಹ ಸಂಬಂಧ, ಇದೆಲ್ಲವನ್ನೂ ಸೂಕ್ಷ್ಮವಾಗಿ ನಿರ್ದೇಶಕರು ತೆರೆದಿಟ್ಟಿದ್ದಾರೆ, ಕಾಲ ಕೆಟೈತಂತ ನೀವು ಕಟ್ಟಿಮ್ಯಾಲ ಮಾತಾಡ್ತೀರಿ ಹಾಡಿನಲ್ಲಿ ಮಕ್ಕಳ ಮೂಲಕ ಸಮಾಜದಲ್ಲಿನ ಆಗುಹೋಗುಗಳನ್ನು ನಿರ್ದೇಶಕರು ತೋರಿಸಿಕೊಟ್ಟಿದ್ದಾರೆ. ಮುಗಿಲೆತ್ತರದ ಗಗನಚುಂಬಿ ಅಪಾರ್ಟ್ ಮೆಂಟ್ಗಳ ನೆರಳಲ್ಲಿ ಕಾರ್ಮಿಕರ ಗುಡಿಸಲುಗಳು, ಅಲ್ಲಿನ ಜನರ ಜೀವನದ ಹಲವು ಕಥೆಗಳನ್ನು ಮೌನವಾಗಿಯೇ ಹೇಳುತ್ತವೆ.
ಪರ್ಶ್ಯಾನ ಪಾತ್ರದಲ್ಲಿ ಬಾಲಕ ಜಗದೀಶ್ ನೈಜ ಅಭಿನಯದಿಂದಲೇ ನೋಡುಗರಿಗೆ ಇಷ್ಟವಾಗುತ್ತಾನೆ, ಆದಿಯಾಗಿ ಮತ್ತೊಬ್ಬ ಬಾಲಕ ಆದಿತ್ಯನ ಡೈಲಾಗ್ ಡಿಲವರಿ ಜನರನ್ನು ಸೆಳೆಯುತ್ತದೆ, ಪಟಪಟ ಮಾತನಾಡುತ್ತ ಇಡೀ ಚಿತ್ರವನ್ನು ಹೆಗಲಮೇಲೆ ಹೊತ್ತೊಯ್ದಿದ್ದಾರೆ. ಪರ್ಶ್ಯಾನ ಪಾತ್ರಕ್ಕೆ ಜೀವ ತುಂಬೋದಲ್ಲದೆ ಪಪ್ಪಿ(ನಾಯಿ)ಯ ಪ್ರೀತಿಯಲ್ಲಿ ಕರಗಿಹೋಗುವ ಪರಿ ಅದ್ಭುತ. ಚಿತ್ರದ ಇಡೀ ಸಂಭಾಷಣೆ ಉತ್ತರ ಕರ್ನಾಟಕದ ಸೊಗಡಿನಲ್ಲಿದೆ. ದುರುಗಪ್ಪ ಕಂಬ್ಬಿ ಹಾಗೂ ರೇಣುಕಾ ಇವರಿಬ್ಬರ ನಟನೆಯೂ ಉತ್ತಮವಾಗಿದೆ. ಸುರೇಶ್ ಬಾಬು ಅವರ ಕ್ಯಾಮೆರಾದಲ್ಲಿ ಪಾತ್ರಗಳ ಬದುಕು ನೈಜವಾಗಿ ಸೆರೆಯಾಗಿದೆ.