ಹಿಂದೆ ಷಹಜಹಾನ್ ತನ್ನ ಪ್ರೀತಿಯ ಪತ್ನಿಗಾಗಿ ತಾಜ್ ಮಹಲನ್ನೇ ಕಟ್ಟಿಸಿದ. ಇಲ್ಲಿ ಸಂಜು ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಉಸಿರಾಟದ ಚೀಲವನ್ನೇ ಪತ್ನಿಗೆ ನೀಡುತ್ತಾನೆ. ಇದು ಈವಾರ ತೆರೆಕಂಡಿರುವ ಸಂಜು ವೆಡ್ಸ್ ಗೀತಾ-2 ಚಿತ್ರದ ಒನ್ ಲೈನ್ ಸ್ಟೋರಿ. ಇದೊಂದು ಅಪರೂಪದ ಪ್ರೇಮಕಥೆಯಾಗಿದ್ದು, ಗಂಡ, ಹೆಂಡತಿಯ ಮೇಲೆ, ಹೆಂಡತಿ, ಗಂಡನ ಮೇಲೆ ಇಟ್ಟಿರುವ ಅಪಾರ ಪ್ರೀತಿ, ನಂಬಿಕೆಯ ದ್ಯೋತಕವಾಗಿ ಮೂಡಿಬಂದಿದೆ. ಪ್ರೀತಿಗಾಗಿ ಇಬ್ಬರೂ ಮಾಡುವ ತ್ಯಾಗಕ್ಕೆ ಬೆಲೆ ಕಟ್ಟಲಾಗದು.
ರೇಷ್ಮೆನಾಡು ಶಿಡ್ಲಘಟ್ಟದಿಂದ ಪ್ರಾರಂಭವಾಗುವ ಸಂಜು ಹಾಗೂ ಗೀತಾ ಪ್ರೇಮಕಥೆ ಮುಂದೆ ಹಲವು ತಿರುವುಗಳನ್ನು ಪಡೆದು ಸ್ವಿಟ್ಟರ್ ಲ್ಯಾಂಡ್ವರೆಗೆ ಟ್ರಾವೆಲ್ ಆಗುತ್ತದೆ, ಒಬ್ಬ ಆದರ್ಶ ಪತಿಯಾಗಿ ಸಂಜು ನೋಡುಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿಬಿಡುತ್ತಾನೆ.
ಸಂಜು (ಶ್ರೀನಗರ ಕಿಟ್ಟಿ) ಶಿಡ್ಲಘಟ್ಟದ ಸಾಮಾನ್ಯ ರೇಶ್ಮೆ ಕೃಷಿ ಮಾಡುವ ರೈತ, ನಾಯಕಿ ಗೀತಾ (ರಚಿತಾರಾಮ್) ಆಗರ್ಭ ಶ್ರೀಮಂತನ ಮಗಳು, ಪತ್ನಿ ಆಗಲಿದ ಮೇಲೆ ಇನ್ನೊಂದು ಮದುವೆಯಾದರೆ, ಮಗಳ ಮೇಲಿನ ಪ್ರೀತಿ ಕಡಿಮೆಯಾಗಿಬಿಡುತ್ತದೆ ಎಂಬ ಆತಂಕದಿಂದ ಮರುಮದುವೆಯಾಗದೆ ಮಗಳಿಗೆ ತಾನೇ ತಂದೆ, ತಾಯಿ ಎರಡೂ ಆಗಿ ಮುದ್ದಿನಿಂದ ಸಾಕಿ ಬೆಳೆಸುತ್ತಾನೆ, ಸುಂದರಿಯಾದ ಗೀತಾ, ಮಿಸ್ ಕರ್ನಾಟಕ ವಿಜೇತೆ, ಮುಂದೆ ಮಿಸ್ ಇಂಡಿಯಾ ಆಗುವ ಕನಸು ಕಂಡವಳು, ಅಂಥಾ ಗೀತಾಳ ಬಾಳಲ್ಲಿ ರೈತ ಸಂಜು ಎಂಟ್ರಿಯಾಗುತ್ತಾನೆ, ಆತನ ಉತ್ತಮ ಗುಣ, ನಡವಳಿಕೆಯನ್ನು ಮೆಚ್ಚಿ ಆತನನ್ನು ಪ್ರೀತಿಸಿದ ಗೀತಾಳ ಲವ್ ಗೆ ತಂದೆಯ ಶ್ರೀಮಂತಿಕೆ ಅಡ್ಡಿಯಾಗುತ್ತದೆ. ಕೊನೆಗೆ ತನ್ನ ತಂದೆಯ ಪ್ರೀತಿ, ಆಸ್ತಿ ಎಲ್ಲವನ್ನೂ ಕಡೆಗಣಿಸಿದ ಗೀತಾ, ಸಂಜು ಪ್ರೀತಿಯನ್ನೇ ಆರಿಸಿಕೊಳ್ಳುತ್ತಾಳೆ, ಪ್ರೀತಿ ಎನ್ನುವುದೇ ಹಾಗೆ ಅದಕ್ಕೆ ಬಡತನ ಸಿರಿತನ ಮುಖ್ಯವಾಗಲ್ಲ.
ತನ್ನನ್ನೇ ನಂಬಿ ಬಂದ ಗೀತಾಳಿಗೆ ಹೊಸ ಬಾಳು ಕೊಡುವ ಸಂಜು, ತನ್ನ ಪತ್ನಿಯ ಪ್ರೋತ್ಸಾಹದಿಂದ ಕೆಲವೇ ವರ್ಷಗಳಲ್ಲಿ ರೇಶ್ಮೆ ಉದ್ಯಮದಿಂದ ಬೆಳವಣಿಗೆ ಕಂಡು ಆಗರ್ಭ ಶ್ರೀಮಂತನಾಗುತ್ತಾನೆ. ಮಾವನೆದುರು ಸಮನಾಗಿ ನಿಲ್ಲುತ್ತಾನೆ. ಇತ್ತ ಗೀತಾ ಕೂಡ ಗರ್ಭವತಿಯಾಗುತ್ತಾಳೆ.
ದಿನಕಳೆದಂತೆ ಗೀತಾಳ ಆರೋಗ್ಯದಲ್ಲಿ ಏರು ಪೇರಾಗಿ, ಆಕೆಯ ಆರೋಗ್ಯ ಕ್ಷೀಣಿಸುತ್ತ ಬಂದು ಶ್ವಾಸಕೋಶದ ಕಾಯಿಲೆ(ಸಿಲ್ಕೋಸಿಸ್ ಕ್ಯಾನ್ಸರ್)ಗೆ ತುತ್ತಾಗುತ್ತಾಳೆ, ಮುಂದೆ ಆಕೆಯ ಶ್ವಾಸಕೋಶವನ್ನೇ ಬದಲಿಸಬೇಕಾಗುತ್ತದೆ.ಆನಂತರ ಆಕೆಗೆ ಶ್ವಾಸಕೋಶ ದಾನ ಮಾಡಲು ದಾನಿಳೊಬ್ಬರು ಮಂದೆ ಬರುತ್ತಾರೆ. ಹೆಚ್ಚಿನ ಚಿಕಿತ್ಸೆಗಾಗಿ ಸಂಜು, ಗೀತಾ ದಂಪತಿಗಳು ದೂರದ ಸ್ವಿಟ್ಟರ್ ಲ್ಯಾಂಡ್ ಗೆ ತೆರಳುತ್ತಾರೆ. ಅಲ್ಲಿ ಗೀತಾಳ ಶ್ವಾಸಕೋಶದ ಆಪರೇಷನ್ ನಡೆದು ಅದು ಯಶಸ್ವಿಯಾಗುತ್ತದೆ, ಆದರೆ ಗೀತಾಳಿಗೆ ಶ್ವಾಸಕೋಶ ದಾನ ಮಾಡಿದ ಆ ವ್ಯಕ್ತಿ ಬೇರೆ ಯಾರೂ ಅಲ್ಲ ಅದು ಸಂಜುನೇ ಆಗಿರುತ್ತಾನೆ.
ಸಂಜು ವೆಡ್ಸ್ ಗೀತಾ ಈಗ ಮೊದಲಿಗಿಂತಲೂ ಸ್ಟಾರ್ಟ್ ಆಗಿದ್ದು, ಚಿತ್ರಕಥೆ ವೇಗ ಪಡೆದುಕೊಂಡಿದೆ, ಪ್ರೇಕ್ಷಕ ಅತ್ತಿತ್ತ ಅಲುಗಾಡಲು ಅವಕಾಶ ನೀಡದಂತೆ ಚಿತ್ರವನ್ನು ತೆಗೆದುಕೊಂಡು ಹೋಗಿದ್ದಾರೆ ನಿರ್ದೇಶಕ ನಾಗಶೇಖರ್, ಶಿಡ್ಲಘಟ್ಟದ ರೇಷ್ಮೆ ಮಾರುಕಟ್ಟೆಯನ್ನು ಸಾಗರದಾಚೆಗೆ ಕೊಂಡೊಯ್ಯಬೇಕೆಂಬ ಸಂಜು ಕನಸು ನನಸಾಯಿತೇ? ಎನ್ನುವ ಪ್ರಶ್ನೆಗೆ ಚಿತ್ರದ ಕೊನೇ ಇಪ್ಪತ್ತು ನಿಮಿಷಗಳಲ್ಲಿ ಉತ್ತರವಿದೆ, ಶ್ರೀನಗರ ಕಿಟ್ಟಿ, ರಚಿತಾರಾಮ್ ಇವರಿಬ್ಬರ ಅಭಿನಯವೇ ಚಿತ್ರದ ಹೈಲೈಟ್. ಅದರ ಜತೆಗೆ ಶ್ರೀಧರ ಸಂಭ್ರಮ್ ಅವರ ಸಂಗೀತದ ಹಾಡುಗಳು ಮನಮೋಹಕವಾಗಿವೆ, ಸತ್ಯ ಹೆಗ್ಡೆ ಅವರ ಕ್ಯಾಮೆರಾದಲ್ಲಿ ಸ್ವಿಟ್ಟರ್ ಲ್ಯಾಂಡ್ ಮನಮೋಹಕವಾಗಿ ಮೂಡಿಬಂದಿದೆ. ಇಡೀ ಚಿತ್ರ ತೆರೆಯ ಮೇಲೆ ಅದ್ದೂರಿಯಾಗಿ ಮೂಡಿಬಂದಿದೆ.
ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ಅವರ ನಿರ್ಮಾಣದ ಸಂಜು ವೆಡ್ಸ್ ಗೀತಾ ಚಿತ್ರದಲ್ಲಿ ಶಿಡ್ಲಘಟ್ಟದ ರೈತರು ಎದುರಿಸುತ್ತಿರುವ ಸಂಕಷ್ಟಗಳು, ಶ್ವಾಸಕೋಶದ ಸಮಸ್ಯೆ. ಇದರ ಜತೆಗೊಂದು ನವಿರಾದ ಪ್ರೇಮಕಥೆಯನ್ನು ನಾಗಶೇಖರ್ ಅದ್ಭುತವಾಗಿ ನಿರೂಪಿಸಿದ್ದಾರೆ. ರೇಶ್ಮೆ ಬೆಳೆಯೋ ರೈತರ ಸಮಸ್ಯೆಯ ಜತೆಗೊಂದು ಮಧುರ ಪ್ರೇಮ ಕಾವ್ಯವನ್ನು ಅದ್ಭುತವಾಗಿ ತೆರೆಮೇಲೆ ಮೂಡಿಸಿದ್ದಾರೆ.
ಡಾಕ್ಟರ್ ಪಾತ್ರದಲ್ಲಿ ನಟ ಚೇತನ್ಚಂದ್ರ ಗಮನ ಸೆಳೆಯುತ್ತಾರೆ. ತಬಲಾನಾಣಿ, ರಾಗಿಣಿ ದ್ವಿವೇದಿ, ರಂಗಾಯಣ ರಘು, ಸಾಧು ಕೋಕಿಲ ಇವರೆಲ್ಲ ತಮಗೆ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.