ಚಿತ್ರ; ಮಾದೇವ,
ನಿರ್ಮಾಪಕರು ; ಕೇಶವ (ದೇವಸಂದ್ರ)
ನಿರ್ದೇಶನ : ನವೀನ್ ರೆಡ್ಡಿ,
ಸಂಗೀತ ; ಪ್ರದ್ಯೋತನ್
ತಾರಾಗಣ : ವಿನೋದ್ ಪ್ರಭಾಕರ್, ಶೃತಿ, ಮಾಲಾಶ್ರೀ, ಸೋನಲ್ ಮೊಂತೆರೊ, ಶ್ರೀನಗರ ಕಿಟ್ಟಿ, ಅಚ್ಯುತ್ ಕುಮಾರ್, ಬಲ ರಾಜವಾಡಿ, ಕಾಕ್ರೋಚ್ ಸುಧಿ, ಬೇಬಿ ನಕ್ಷತ್ರ ಹಾಗೂ ಇತರರು...
ಅತ್ಯಂತ ಕ್ರೂರ ಅಪರಾಧಗಳನ್ನು ಮಾಡಿದವರು, ಕಾನೂನಿನ ಅಡಿಯಲ್ಲಿ ಆತ ಸಮಾಜದಲ್ಲಿ ಆತ ಬದುಕಲು ಅನರ್ಹ ಎಂದು ನಿರ್ಧರಿತವಾದ ಸಂದರ್ಭಗಳಲ್ಲಿ ಅಂಥಾ ಅಪರಾಧಿಗಳಿಗೆ ನಮ್ಮ ದೇಶದ ಕಾನೂನಿನಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ. ಅವರನ್ನು ಗಲ್ಲಿಗೇರಿಸುವ ವ್ಯಕ್ತಿಯೂ ಸಹ ಅಷ್ಟೇ ಕಠಿಣ ಹೃದಯದವನಾಗಿರಬೇಕು. ಅಂಥ ವ್ಯಕ್ತಿಯೊಬ್ಬನ ಜೀವನದ ಕಥೆಯನ್ನು ನಿರ್ದೇಶಕ ನವೀನ್ ರೆಡ್ಡಿ ಅವರು ಮಾದೇವ ಚಿತ್ರದ ಮೂಲಕ ಹೇಳಿದ್ದಾರೆ. ಚಿತ್ರದ ನಾಯಕ ಮಾದೇವ(ವಿನೋದ್ ಪ್ರಭಾಕರ್) ಕಾರಾಗೃಹದಲ್ಲಿ ಒಬ್ಬ ಹ್ಯಾಂಗ್ ಮ್ಯಾನ್, ಕಾನ್ಸ್ ಟೇಬಲ್ ಮಗನಾದ ಆತ ಚಿಕ್ಕವನಿದ್ದಾಗಲೇ ತಂದೆಯನ್ನು ಕಳೆದುಕೊಂಡು ಚಿಕ್ಕಪ್ಪ, ಚಿಕ್ಕಮ್ಮನ ಆಸರೆಯಲ್ಲಿರುತ್ತಾನೆ. ಆತನ ಹೆಸರಲ್ಲಿದ್ದ ಆಸ್ತಿ ಪಡೆಯುವ ದುರಾಸೆಯಿಂದ ಮಾದೇವನನ್ನು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿರುತ್ತಾರೆ. 20 ವರ್ಷ ಜಗತ್ತನ್ನೇ ನೋಡದೆ ಕತ್ತಲೆ ಕೋಣೆಯಲ್ಲೇ ಬೆಳೆದ ಮಾದೇವನನ್ನು ಒಬ್ಬ ರೈಲು ಚಾಲಕ(ಅಚ್ಯುತ್ ಕುಮಾರ್) ಅಲ್ಲಿಂದ ಹೊರತಂದು ಹೊಸ ಜೀವನ ನೀಡುತ್ತಾನೆ. ಹೀಗೆ ನಗು ಅಳು, ಸುಖ ದುಖ ಯಾವುದಕ್ಕೂ ಪ್ರತಿಕ್ರಿಯೆ ನೀಡದ ಕಲ್ಲು ಹೃದಯದ ಮಾದೇವನ ಜೀವನದಲ್ಲಿ ಬರುವ ಪಾರ್ವತಿ(ಸೋನಾಲ್ ಮಾಂತೆರೋ), ಆತನ ಹೃದಯದಲ್ಲಿ ಪ್ರೀತಿಯ ಹೂ ಅರಳಿಸುತ್ತಾಳೆ. ಈ ನಡುವೆ ಆ ಏರಿಯಾದ ವಿದ್ಯಾರ್ಥಿಗಳನ್ನು ಬಳಸಿಕೊಂಡು ಡ್ರಗ್ಸ್ ದಂಧೆ ನಡೆಸುವ ಸಮುದ್ರ(ಶ್ರೀನಗರ ಕಿಟ್ಟಿ)ನ ಹಾವಳಿ ಹೆಚ್ಚಾಗುತ್ತದೆ. ಭಾವನೆಗಳೇ ಇಲ್ಲದೆ ತಾನಾಯಿತು, ತನ್ನ ಕೆಲಸವಾಯಿತು ಎನ್ನುವಂತಿರುವ ಮಾದೇವ ಅಬ್ಬಲಗೆರೆ ಕೇಂದ್ರ ಕಾರಾಗೃಹದಲ್ಲಿ ಅಪರಾಧಿಗಳನ್ನು ನೇಣು ಕುಣಿಕೆಗೆ ಹಾಕುವ ಕಾಯಕ ಮಾಡಿಕೊಂಡಿರುತ್ತಾನೆ.
ಅದೇ ಜೈಲಲ್ಲಿ ಮಾಡದ ಅಪರಾಧವನ್ನು ಹೊತ್ತು ಜೈಲುವಾಸ ಅನುಭವಿಸುತ್ತಿರುವ ತನ್ನ ತಾಯಿಗೆ ಮನೆ ಊಟ ಕೊಡಲು ಪರದಾಡುವ ಮಗಳು ಪಾರ್ವತಿ, ಅದಕ್ಕೆ ಮಾದೇವನ ಸಹಕಾರ ಬಯಸುತ್ತಾಳೆ. ಆತನ ಮೂಲಕ ತನ್ನ ತಾಯಿಗೆ ಊಟ ತಲುಪಿಸಲು ಮುಂದಾಗುತ್ತಾಳೆ, ಆರಂಭದಲ್ಲಿ ಈಕೆಯ ಮಾತು ಬೇಡಿಕೆಗೆ ಸೊಪ್ಪು ಹಾಕದ ಮಾದೇವ, ನಂತರ ನಡೆದ ಕೆಲ ಘಟನೆಗಳಿಂದ ಮೃದುವಾಗುತ್ತಾ ಬರುತ್ತಾನೆ, ಮಾರ್ವತಿಯ ಸ್ನೇಹಕ್ಕೆ ಮಾದೇವ ಕರಗಿ ನೀರಾಗುತ್ತಾನೆ. ಸನ್ನಡತೆಯ ಆಧಾರದ ಮೇಲೆ ಪಾರ್ವತಿಯ ತಾಯಿಯ ಬಿಡುಗಡೆಯಾಗುತ್ತದೆ. ಮಾದೇವನ ಜೀವನ ಅವನ ಹಿನ್ನೆಲೆ ತಿಳಿದ ಪಾರ್ವತಿ ಮಾದೇವನನ್ನ ಪ್ರೀತಿಸಿ ಮದುವೆಯಾಗುತ್ತಾಳೆ. ಈ ನಡುವೆ ಮರಣದಂಡನೆಗೆ ಗುರಿಯಾಗಿರುವ ತನ್ನ ಮಗ ಜಿಲೇಬಿ (ಕಾಕ್ರೋಚ್ ಸುದೀ)ಯನ್ನು ಹೇಗಾದರೂ ಮಾಡಿ ನೇಣು ಕುಣಿಕೆಗೆ ಬೀಳದಂತೆ ರಕ್ಷಿಸುವಂತೆ ಆತನ ತಾಯಿ ಕಮಲಾಕ್ಷಿ (ಶೃತಿ) ಮಾದೇವನ ಸಹಾಯ ಕೇಳುತ್ತಾಳೆ, ವಿಷಯ ತಿಳಿಯದೆ ಆಕೆಗೆ ರಕ್ಷಿಸುವ ಭಾಷೆ ಕೊಟ್ಟರೂ, ಆತ ಮಾಡಿದ ದುಷ್ಕೃತ್ಯಗಳನ್ನು ಕಂಡು ತಪ್ಪಿಸಲು ಪ್ರಯತ್ನಿಸುವುದಿಲ್ಲ, ಇದೇ ಸೇಡಿನಿಂದ ಕಮಲಾಕ್ಷಿ ಮಾದೇವನ ಗರ್ಭಿಣಿ ಪತ್ನಿ ಪಾರ್ವತಿ ಹಾಗೂ ಆಕೆಯ ತಾಯಿಯನ್ನು ಬರ್ಬರವಾಗಿ ಹತ್ಯೆಗೈಯುತ್ತಾಳೆ. ಇದೆಲ್ಲವನ್ನೂ ಮಾದೇವ ಹೇಗೆ ಎದುರಿಸುತ್ತಾನೆ, ಕಾಮಾಕ್ಷಿಯ ಮೇಲೆ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದನ್ನ ತಿಳಿಯಬೇಕಾದರೆ ಒಮ್ಮೆ ಥೇಟರಿಗೆ ಹೋಗಿ ಈ ಚಿತ್ರವನ್ನು ನೀವು ನೋಡಬೇಕು.
ವಿನೋದ್ ಪ್ರಭಾಕರ್ ಈ ಹಿಂದೆ ಇಂಥ ಪಾತ್ರವನ್ನು ಮಾಡಿಲ್ಲವೆಂದೇ ಹೇಳಬಹುದು. ಅದ್ಭುತವಾದ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹ್ಯಾಂಗ್ಮ್ಯಾನ್ ಪಾತ್ರದಲ್ಲಿ ಜೀವಿಸಿದ್ದಾರೆ. ಅವರ ಹವಾ ಭಾವ, ತಟಸ್ಥ ಮನಸ್ಥಿತಿಯ ಕಲ್ಲಿನ ಹೃದಯದ ವ್ಯಕ್ತಿಯಾಗಿ ನಂತರ ಮನಪರಿವರ್ತನೆಗೊಂಡು ಸಜ್ಜನನಾಗಿ ರೂಪುಗೊಳ್ಳುತ್ತಿರುವಾಗಲೇ ನಡೆದ ಘಟನೆಯೊಂದು ಆತನನ್ನು ಮತ್ತೆ ವ್ಯಾಘ್ರನನ್ನಾಗಿ ಮಾಡುತ್ತದೆ. ಹೀಗೆ ಹಲವಾರು ಶೇಡ್ ಗಳಲ್ಲಿ ವಿನೋದ್ ಪ್ರಭಾಕರ್ ಕಾಣಿಸಿಕೊಂಡು ಮನೋಜ್ಞವಾಗಿ ಅಭಿನಯಿಸಿದ್ದಾರೆ.
ಅದೇ ರೀತಿ ಹಿರಿಯ ನಟಿ ಶೃತಿ ಕೂಡ ಎರಡು ಶೇಡ್ ಪಾತ್ರದ ಮೂಲಕ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಮುದ್ದಾದ ಹಳ್ಳಿ ಹುಡುಗಿಯಾಗಿ, ಮಾತಿನ ವರಸೆಯ ಜೊತೆ ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿರುವ ಸೋನಾಲ್ ಮಾಂತೆರೋ ಚಿತ್ರದ ಹೈಲೈಟ್. ಹಿರಿಯ ನಟ ಅಚ್ಚುತ್ ಕುಮಾರ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ವಿಲನ್ ಆಗಿ ಶ್ರೀನಗರ ಕಿಟ್ಟಿ ಅಬ್ಬರಿಸಿದ್ದಾರೆ. ಪೊಲೀಸ್ ಇನ್ ಸ್ಪೆಕ್ಟರ್ ಆಗಿ ವಿಶೇಷ ಪಾತ್ರದಲ್ಲಿ ಬಂದು ಹೋಗುವ ಮಾಲಾಶ್ರೀ ಸೇರಿದಂತೆ ಕಲಾವಿದರಾದ ಬಲ ರಾಜವಾಡಿ, ಕಾಕ್ರೋಚ್ ಸುದೀ ಹೀಗೆ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಪಾತ್ರಗಳಿಗೆ ತಕ್ಕಂತೆ ಕಲಾವಿದರು ಹಾಗೂ ಅತ್ಯುತ್ತಮ ತಂತ್ರಜ್ಞರನ್ನೇ ಆಯ್ಕೆ ಮಾಡಿಕೊಂಡಿರೋದು ಚಿತ್ರದ ಪ್ಲಸ್ ಪಾಯಿಂಟ್.
ಎಷ್ಟೇ ಕಟುಕ ವ್ಯಕ್ತಿಯಾದರೂ ಆತನಲ್ಲೂ ಒಂದು ಹೃದಯ ಇರುತ್ತದೆ ಎಂಬುದನ್ನ ಹೇಳಿದ್ದಾರೆ ನಿರ್ದೇಶಕ ನವೀನ್ ರೆಡ್ಡಿ, ಇಡೀ ಚಿತ್ರದ ಹೈಲೈಟ್ ಪ್ರದ್ಯೋತನ್ ಅವರ ಸಂಗೀತ, ಹಿನ್ನೆಲೆ ಸಂಗೀತ, ಹಾಗೆಯೇ ಬಾಲಕೃಷ್ಣ ಅವರ ಕ್ಯಾಮರಾ ಕೈಚಳಕ ಗಮನ ಸೆಳೆಯುತ್ತದೆ.