ಬೆಂಗಳೂರು: ಇದೇ 2025ರ ಮೇ ತಿಂಗಳ 30 ರಂದು ಕನ್ನಡದಲ್ಲಿ ತೆರೆಕಂಡ ‘ತಾಯವ್ವ’ ಚಿತ್ರ ಯಶಸ್ವಿಯಾಗಿ 25 ದಿನಗಳ ಪ್ರದರ್ಶನವನ್ನು ಪೂರೈಸಿದೆ. `ಅಮರ ಫಿಲಂಸ್` ಬ್ಯಾನರಿನಲ್ಲಿ ಗೀತಪ್ರಿಯಾ ನಿರ್ಮಿಸಿ, ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ `ತಾಯವ್ವ` ಮಹಿಳಾ ಪ್ರದಾನ ಕಥಾಹಂದರವನ್ನು ಹೊಂದಿದ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಗ್ರಾಮೀಣ ಭಾಗದ ಸೂಲಗಿತ್ತಿ ಮಹಿಳೆಯ ಬದುಕನ್ನು ಅನಾವರಣ ಮಾಡಲಾಗಿದೆ.
ಸದ್ಯ ಬಿಡುಗಡೆಯಾಗಿರುವ `ತಾಯವ್ವ` ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದೇ ಖುಷಿಯನ್ನು ಹಂಚಿಕೊಳ್ಳುವ ಸಲುವಾಗಿ ಚಿತ್ರತಂಡ, ‘ತಾಯವ್ವ’ ಚಿತ್ರದ ಯಶಸ್ವಿ ಪತ್ರಿಕಾಗೋಷ್ಟಿ (ಸಕ್ಸಸ್ ಮೀಟ್) ಆಯೋಜಿಸಿತ್ತು.
ಈ ಸಮಾರಂಭದಲ್ಲಿ ಹಿರಿಯ ನಟ ಸುರೇಶ್ ಹೆಬ್ಳೀಕರ್, ಸಂಗೀತ ನಿರ್ದೇಶಕ ಕೆ. ಕಲ್ಯಾಣ್, ಲಹರಿ ವೇಲು, ನಿರ್ದೇಶಕರಾದ ಯೋಗರಾಜ್ ಭಟ್, ಹರಿಪ್ರಸಾದ್ ಜಯಣ್ಣ, ನಿರ್ಮಾಪಕ ಸಿಲ್ಕ್ ಮಂಜು, `ಕೃಪಾನಿಧಿ ಸಮೂಹ ಶಿಕ್ಷಣ ಸಂಸ್ಥೆ`ಗಳ ಅಧ್ಯಕ್ಷ ಸುರೇಶ್ ನಾಗಪಾಲ್, ನಟ ನಿರಂಜನ್ ಶೆಟ್ಟಿ, ನಟಿ ಸಿಂಧೂ ಲೋಕನಾಥ್ ಸೇರಿದಂತೆ ಚಿತ್ರರಂಗ ಮತ್ತು ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಹಾಜರಿದ್ದರು.
ಇದೇ ವೇಳೆ ಮಾತನಾಡಿದ `ತಾಯವ್ವ` ಚಿತ್ರದ ನಿರ್ಮಾಪಕಿ ಮತ್ತು ನಟಿ ಗೀತಪ್ರಿಯಾ, ಸೂಲಗಿತ್ತಿಯೊಬ್ಬಳ ಬದುಕಿನ ಅನಾವರಣ `ತಾಯವ್ವ` ಸಿನಿಮಾದ ಮೂಲಕ ಮಾಡಿದ್ದೇವೆ. ಸೂಲಗಿತ್ತಿ ನರಸಮ್ಮ ಅವರಂಥ ನಮ್ಮ ಗ್ರಾಮೀಣ ಭಾಗದ ಅನೇಕ ಸೂಲಗಿತ್ತಿ ಮಹಿಳೆಯರನ್ನು ಪ್ರೇರಣೆಯಾಗಿ ತೆಗೆದುಕೊಂಡು ಈ ಸಿನಿಮಾ ಮಾಡಿದ್ದೇವೆ. ನಮ್ಮ ಸಿನಿಮಾ ಬಿಡುಗಡೆಯಾದ ನಂತರ ಪ್ರೇಕ್ಷಕರು ಮತ್ತು ಮಾಧ್ಯಮಗಳಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. `ತಾಯವ್ವ` ಸಿನಿಮಾವನ್ನು ನೋಡಿದ ಪ್ರತಿಯೊಬ್ಬರೂ ಈ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಬೆಳಿಸಿ ಎಂಬ ಸಂದೇಶ ಸಿನಿಮಾ ನೋಡಿದ ಪ್ರತಿಯೊಬ್ಬರ ಮನಮುಟ್ಟಿದೆ’ ಎಂದರು.
ನಮ್ಮ ಮೊದಲ ಸಿನಿಮಾಕ್ಕೇ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆ ಸಿಗುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ. `ತಾಯವ್ವ` ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡು ಮಾತನಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಮುಂದೆಯೂ ಇಂಥದ್ದೇ ಸಾಮಾಜಿಕ ಕಥಾಹಂದರದ ಕಥೆಗಳನ್ನು ಸಿನಿಮಾ ಮಾಡಿ ತೆರೆಮೇಲೆ ತರಲು ಇದು ನಮಗೆ ಪ್ರೋತ್ಸಾಹಿಸಿದಂತಾಗಿದೆ’ ಎಂದರು.
`ತಾಯವ್ವ` ಚಿತ್ರದ ಯಶಸ್ಸಿನ ಸಂಭ್ರಮದಲ್ಲಿ ಹಾಜರಿದ್ದ ಅನೇಕ ಗಣ್ಯರು ಚಿತ್ರದ ಬಗ್ಗೆ ಮತ್ತು ನಟಿ, ನಿರ್ಮಾಪಕಿ ಗೀತಪ್ರಿಯಾ ಅವರ ಬಗ್ಗೆ ನೆಚ್ಚುಗೆಯ ಮಾತುಗಳನ್ನಾಡಿದರು.