ನಮ್ಮ ರಾಜಧಾನಿ ಬೆಂಗಳೂರು ಸಿಟಿಗೆ ಅದರದೇ ಆದ ಇತಿಹಾಸವಿದೆ. ಇಲ್ಲಿ ಡ್ರಗ್ಸ್, ಗಾಂಜಾ ಸ್ಮಗ್ಲಿಂಗ್, ರೌಡಿಗಳ ಹಾವಳಿ, ಮಾಫಿಯಾ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಲೇ ಬಂದಿವೆ.ಈ ಕ್ಯಾಪಿಟಲ್ ಸಿಟಿಯ ಭೂಗತ ಲೋಕಕ್ಕೆ ನಾನೇ ಡಾನ್ ಆಗಬೇಕೆಂದು ದೊಡ್ಡ ಗ್ಯಾಂಗ್ ವಾರ್ ಗಳು ಆಗಾಗ ನಡೆಯುತ್ತಲೇ ಇರುತ್ತವೆ. ಈ ಮಧ್ಯ ಅನಾಥ ಯುವಕನೊಬ್ಬ ತನಗಾದ ಅನ್ಯಾಯಕ್ಕೆ ಹೇಗೆ ಸೇಡು ತೀರಿಸಿಕೊಂಡ ಎಂಬುದನ್ನು ಮಾಸ್ ಕಂಟೆಂಟ್ ನೊಂದಿಗೆ ನಿರ್ದೇಶಕ ಆರ್. ಅನಂತರಾಜು ಅವರು ಹೆಣೆದಿರುವ ಕಥೆಯೇ ಕ್ಯಾಪಿಟಲ್ ಸಿಟಿ.
ತಂದೆ ತಾಯಿ ಇಲ್ಲದ ಅನಾಥ ಮಕ್ಕಳನ್ನಿಟ್ಟುಕೊಂಡು ಅನಾಥಾಶ್ರಮ ನಡೆಸುವ ವ್ಯಕ್ತಿ ಭಗವಾನ್ದಾಸ್. ಕಷ್ಟಪಟ್ಟು ದುಡಿಯುವ ಜನಸಾಮಾನ್ಯ ಅಸಹಾಯಕತೆ ಬಳಸಿಕೊಂಡು ಮೀಟರ್ಬಡ್ಡಿ ವ್ಯವಹಾರ ಮಾಡುವವರ ದರ್ಪಕ್ಕೆ ತಕ್ಕ ಶಾಸ್ತಿ ಮಾಡುವ ನಾಯಕ ಪೃಥ್ವಿ(ರಾಜೀವ್ ರೆಡ್ಡಿ), ಇದರ ಜತೆಗೊಂದು ರೋಚಕ ಫ್ಲಾಶ್ಬ್ಯಾಕ್ ಇಟ್ಟುಕೊಂಡು ಒಂದು ಗ್ಯಾಂಗ್ಸ್ಟರ್ ರಿವೇಂಜ್ ಸ್ಟೋರಿಯನ್ನು ನಿರ್ದೇಶಕರು ತೆರೆಮೇಲೆ ತಂದಿದ್ದಾರೆ. ಗ್ಯಾಂಗ್ ಕಟ್ಟಿಕೊಂಡು ಮೀಟರ್ಬಡ್ಡಿ ವ್ಯವಹಾರ ಮಾಡುವ ಧನ್ಪಾಲ್ (ರವಿ ಶಂಕರ್) ಅಂಡರ್ವರ್ಲ್ಡ್ ಡಾನ್ ಆಗಿ ಮೆರೆಯುವುದಕ್ಕೆ ತನ್ನ ಬಂಟರ ಜೊತೆಗೆ ರಾಜಕೀಯ, ಪೊಲೀಸ್ ಅಧಿಕಾರಿಗಳ ಸಪೋರ್ಟ್ ಕೂಡ ಇರುತ್ತದೆ. ಇವರ ದೌರ್ಜನ್ಯಕ್ಕೆ ನಲುಗುವ ಜನರ ಬೆಂಬಲಕ್ಕೆ ಬರುವ ಪೃಥ್ವಿ, ಬೇರೆ ಬೇರೆ ವೇಷ ಹಾಕಿಕೊಂಡು ಇವರನ್ನು ಸದೆ ಬಡಿಯುತ್ತಾನೆ. ಇದು ಪೊಲೀಸ್ ಇಲಾಖೆಗೂ ದೊಡ್ಡ ತಲೆನೋವಾಗಿ ಪರಿಣಮಿಸಿ ಹಿರಿಯ ಪೊಲೀಸ್ ಅಧಿಕಾರಿ ಎಸಿಪಿ ದೇಶಪಾಂಡೆ (ಶರತ್ ಲೋಹಿತಾಶ್ವ) ಕೈಗೆ ಈ ಕೇಸ್ ಬರುತ್ತದೆ.
ಈ ನಡುವೆ ಬಿಸಿನೆಸ್ಮ್ಯಾನ್ ಬಲವಂತರಾವ್ ಪುತ್ರಿ ಅನು (ಪ್ರೇರಣ) ಆಕಸ್ಮಿಕವಾಗಿ ಪೃಥ್ವಿಯನ್ನ ಪೋಲಿಸ್ ಅಧಿಕಾರಿಯಾಗಿ ನೋಡಿ ಇಷ್ಟ ಪಡುತ್ತಾಳೆ. ತಂದೆಯ, ಪ್ರೀತಿಯಿಂದ ವಂಚಿತಳಾದ ಈಕೆ ಪೃಥ್ವಿಯ ಸಾಹಸವನ್ನ ನೋಡಿ ಆತನನ್ನು ಇಷ್ಟ ಪಡುತ್ತಾಳೆ. ಆದರೆ ಪೃಥ್ವಿಯ ಗುರಿಯೇ ಬೇರೆ ಇರುತ್ತದೆ, ತನ್ನ ಬಂಟರನ್ನೆಲ್ಲ ಸೆದೆ ಬಡಿಯುತ್ತಿರುವವರು ಯಾರೆಂದು ಯೋಚಿಸಿದ ಧನ್ಪಾಲ್ಗೆ ವೈರಿ ಜಯರಾಜ್ (ಸುಮನ್) ಮೇಲೆ ಅನುಮಾನ ಬರುತ್ತದೆ.ಅನಾಥಾಶ್ರಮದಲ್ಲಿ ಬೆಳೆದ ಬಾಲಕ ಪೃಥ್ವಿಗೆ ಅಲ್ಲಿನ ಜನರೇ ಬಂಧುಗಳು. ಈ ಒಡನಾಟದಲ್ಲಿ ಒಂದು ದೊಡ್ಡ ದುರಂತ ನಡೆದುಹೋಗಿ, ಅದು ಪೃಥ್ವಿಯ ಮನಸಿನಲ್ಲಿ ರೋಷ ಹೆಚ್ಚಿಸುತ್ತದೆ. ಮುಂದೆ ನಡೆಯೋ ಒಂದಷ್ಟು ಘಟನೆಗಳು, ಪೃಥ್ವಿಯ ಹಿನ್ನೆಲೆ ಏನು, ಆತನಿಗೆ ಧನ್ಪಾಲ್ ಮೇಲೆ ಯಾಕಿಷ್ಟು ರೋಷಾವೇಶ, ಇದಕ್ಕೆಲ್ಲ ನಾಯಕ ಪೃಥ್ವಿಯ ಬಾಲ್ಯದಲ್ಲಿ ನಡೆದ ಘೋರ ಘಟನೆ ಉತ್ತರ ನೀಡುತ್ತದೆ.
ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತುವಿನಲ್ಲಿ ಹೊಸತನ ಇಲ್ಲದಿದ್ದರೂ, ಚಿತ್ರಕಥೆಯನ್ನು ತೆಗೆದುಕೊಂಡು ಹೋಗಿರುವ ಶೈಲಿ ಪ್ರೇಕ್ಷಕರ ಗಮನ ಸೆಳೆಯುತ್ತದೆ. ಇಬ್ಬರು ರೌಡಿಗಳ ಅಟ್ಟಹಾಸ, ನೊಂದವರ ಪರದಾಟ, ಅನ್ಯಾಯದ ವಿರುದ್ದ ಸಿಡಿದೇಳುವ ನಾಯಕ , ಪ್ರೀತಿಯ ತಳಮಳ ಹೀಗೆ ಕೆಲವು ಸನ್ನಿವೇಶಗಳು ಪ್ರೇಕ್ಷಕರ ಹೃದಯ ತಟ್ಟುತ್ತವೆ, ಮಾಸ್ಕಂಟೆಂಟ್ನೊಂದಿಗೆ ಸುಂದರ ಹಾಡುಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ, ಚಿತ್ರದಲ್ಲಿ ಆಕ್ಷನ್ ಸ್ವಲ್ಪ ಜಾಸ್ತಿ ಎನಿಸಿದರೂ ಮಾಸ್ ಪ್ರಿಯರನ್ನು ದೃಷ್ಟಿಯಲ್ಲಟ್ಟುಕೊಂಡು ಮಾಡಿರುವ ಚಿತ್ರವಾದ್ದರಿಂದ ಅದು ಗಣನೆಗೆ ಬಬರುವುದಿಲ್ಲ.
ನಿರ್ಮಾಪಕರು ಮಾಡಿರೋ ಖರ್ಚು ತೆರೆಯ ಮೇಲೆ ಎದ್ದು ಕಾಣುತ್ತದೆ ನಿಜ ಜೀವನದಲ್ಲಿ ಮಿಲಿಟರಿ ನಿವೃತ್ತ ಅಧಿಕಾರಿಯಾಗಿದ ಕಳೆದ ತಿಂಗಳು ಬಿಡುಗಡೆಯಾದ ``ಮಾಂಕ್ ದಿ ಯಂಗ್`` ಚಿತ್ರದ ನಿರ್ಮಾಪಕ `ಕರ್ನಾಲ್ ರಾಜೇಂದ್ರ` ಈ ಚಿತ್ರದಲ್ಲಿ ನಿರ್ಮಾಪಕ ಮತ್ತು ಪೊಲೀಸ್ ಆಯುಕ್ತರಾಗಿ ಅದ್ಭುತವಾಗಿ ನಟಿಸಿದ್ದಾರೆ . ಚಿತ್ರದ ಎಲ್ಲಾ ಹಾಡುಗಳು ಗಮನ ಸೆಳೆಯುವಂತಿವೆ.. ತಾಂತ್ರಿಕವಾಗಿ ಚಿತ್ರತಂಡ ಶ್ರಮ ವಹಿಸಿರುವುದು ಚಿತ್ರಕ್ಕೆ ಪೂರಕವಾಗಿದೆ,ಕ್ಯಾಮೆರಾ ಕೆಲಸ ಅದ್ಭುತವಾಗಿದೆ ಜಿಂದಗಿ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟಿದ್ದ ರಾಜೀವ್ ರೆಡ್ಡಿ, ಕ್ಯಾಪಿಟಲ್ ಸಿಟಿಯಲ್ಲಿ ಮತ್ತೊಮ್ಮೆ ಮಾಸ್ ಹೀರೋ ಆಗಿ ಗಮನ ಸೆಳೆದಿದ್ದಾರೆ. ನಾಯಕಿ ಪ್ರೇರಣ ಕೊಟ್ಟ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇನ್ನು ನಟ ರವಿಶಂಕರ್ ಖಳನಾಯಕನಾಗಿ ಎಂದಿನಂತೆ ಆರ್ಭಟಿಸಿದ್ದು , ಪೊಲೀಸ್ ಅಧಿಕಾರಿಯಾಗಿ ಶರತ್ ಲೋಹಿತಾಶ್ವ ಪಾತ್ರಕ್ಕೆ ಜೀವ ತುಂಬಿದ್ದಾರೆ. ಉಳಿದಂತೆ ಮತ್ತೊಬ್ಬ ಡಾನ್ ಆಗಿ ಸುಮನ್, ಶಾಸಕನಾಗಿ ಕೆ.ಎಸ್. ಶ್ರೀಧರ್, ಎಲ್ಲರ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿವೆ. ಸಾಕಷ್ಟು ಮನರಂಜನಾತ್ಮಕ ಅಂಶಗಳು ಚಿತ್ರದಲ್ಲಿದ್ದು ಕಂಪ್ಲೀಟ್ ಪ್ರಾಕೇಜ್ ಚಿತ್ರವಾಗಿ ಕ್ಯಾಪಿಟಲ್ ಸಿಟಿ ಮೂಡಿಬಂದಿದೆ, ವೀಕೆಂಡ್ನಲ್ಲಿ ಮನರಂಜನೆ ಪಡೆಯಲು ಈ ಚಿತ್ರ ಒಂದು ಉತ್ತಮ ಆಯ್ಕೆಯಾಗಿದೆ.