ಯಾರೊಬ್ಬರ ಆಶ್ರಯವೂ ಇಲ್ಲದೆ ಅನಾಥನಾಗಿ ಬೆಳೆದ ಕಳ್ಳನೊಬ್ಬನ ಜೀವನದಲ್ಲಿ ಪ್ರೀತಿಯೆಂಬ ಹೂ ಚಿಗುರಿದಾಗ ಆಗೋ ಬದಲಾವಣೆಯ ಸುತ್ತ ನಡೆಯುವ ಘಟನೆಗಳನ್ನಿಟ್ಟುಕೊಂಡು ನಿರ್ದೇಶಕ ಸಾಯಿಪ್ರದೀಪ್ ಖದೀಮ ಚಿತ್ರದ ಕಥೆಯನ್ನು ಹೆಣೆದು ಪ್ರೇಕ್ಷಕರ ಮುಂದೆ ತಂದಿದ್ದಾರೆ.
ಪುಂಡರ ಅಟ್ಟಹಾಸ, ಮಮಕಾರ , ಸ್ನೇಹಿತರ ಸಹಕಾರ , ಜನರಿಗಾಗಿ ಗುದ್ದಾಟದ ಸುಳಿಯಲ್ಲಿ ಸಾಗುವ ಮಾರ್ಕೆಟ್ ವಾಸಿಗಳ ಬದುಕು ಭಾವನೆಗಳ ಸುತ್ತ ನಡೆಯುವ ಕಥೆಯನ್ನು ಅಚ್ಚುಕಟ್ಟಾಗಿ ತೆರೆಮೇಲೆ ಮೂಡಿಸಿದ್ದಾರೆ.
ಅದು ಮಾರ್ಕೆಟ್ ಏರಿಯಾ. ಅಲ್ಲಿ ಪ್ರತಿನಿತ್ಯ ವ್ಯಾಪಾರ, ವಹಿವಾಟುಗಳು ನಡೆಯುತ್ತವೆ. ಅಲ್ಲಿ ಕೆಲವರು ಪ್ರಾಮಾಣಿಕವಾಗಿ ವ್ಯಾಪಾರ ಮಾಡಿದರೆ, ಮತ್ತೆ ಕೆಲವರು ಕದ್ದ ವಸ್ತುಗಳನ್ನ ಮಾರಾಟ ಮಾಡುವುದನ್ನೆ ಕಾಯಕ ಮಾಡಿಕೊಂಡಿರುತ್ತಾರೆ.
ಇದೇ ಸ್ಥಳದಲ್ಲಿ ಸಣ್ಣ ಪುಟ್ಟ ಕಳ್ಳತನ ಮಾಡುತ್ತಾ ರಾಜಕಾರಣಿಗಳ ಬಂಟನಾಗಿ, ಮಾರ್ಕೆಟ್ ಏರಿಯಾದಲ್ಲಿ ಸದ್ದು ಮಾಡುತ್ತ, ಗೆಳೆಯರ ಗುಂಪು ಕಟ್ಟಿಕೊಂಡಿದ್ದ ಸೂರ್ಯ (ಚಂದನ್) ತನ್ನನ್ನ ಬೆಳೆಸಿದ ತಾತ, ಅಜ್ಜಿಯ ಹೋಟೆಲನ್ನೇ ಅಡ್ಡ ಮಾಡಿಕೊಂಡಿರುತ್ತಾನೆ. ಆಕಸ್ಮಿಕವಾಗಿ ಈ ಸೂರ್ಯನ ಕಣ್ಣಿಗೆ ಬೀಳುವ ರಂಗಕಲಾವಿದೆ ಪ್ರಕೃತಿ (ಅನುಷಾ ಕೃಷ್ಣ)ಯ ನೋಟಕ್ಕೆ ಮನಸೋತು ಆಕೆಯ ಪ್ರೀತಿಯಲ್ಲಿ ಮುಳುಗುತ್ತಾನೆ.
ಇದರ ನಡುವೆ ಪರ್ಸನಲ್ ಲೋನ್ ನೀಡಲು ಮುಂದಾಗುವ ಬ್ಯಾಂಕ್ ಹುಡುಗಿಗೆ ಸುಳ್ಳು ದಾಖಲಾತಿ ನೀಡಿ ಹಣ ಪಡೆದು ವಂಚಿಸಿರುತ್ತಾನೆ. ಹಾಗೆಯೇ ಮಾರ್ಕೆಟ್ ಜನರ ಕಷ್ಟ ಸುಖಕ್ಕೆ ಸ್ಪಂದಿಸುವಂತಹ ವ್ಯಕ್ತಿ ಎಂದು ಭಾವಿಸಿ ಲೋಕಲ್ ಲೀಡರ್ ರೆಡ್ಡಿ (ಶೋಭ್ ರಾಜ್)ಯ ಬಂಟನಾಗಿ ಕೆಲಸ ಮಾಡುವ ಸೂರ್ಯ, ಮಾರ್ಕೆಟ್ ಜನರನ್ನ ಒಗ್ಗೂಡಿಸಿ ಕಾರ್ಪೊರೇಟರ್ ಚುನಾವಣೆ ಸಮಯದಲ್ಲಿ ಮತ ಹಾಕುವಂತೆ ಪ್ರೇರೇಪಿಸುತ್ತಾನೆ.
ಇದರ ನಡುವೆ ಸೂರ್ಯ ಹಾಗೂ ಪ್ರಕೃತಿಯ ನಡುವಿನ ಪ್ರೀತಿಯಲ್ಲಿ ಕಳಂಕ ಹುಟ್ಟಿಕೊಳ್ಳುತ್ತದೆ. ಸೂರ್ಯ ಒಬ್ಬ ಕಳ್ಳ ಎಂಬ ವಿಷಯ ತಿಳಿದ ಪ್ರಕೃತಿ ಆತನಿಂದ ದೂರ ಹೋಗುತ್ತಾಳೆ. ಅದರ ಹಿಂದೆ ಒಂದು ಬಲವಾದ ಕಾರಣವಿರುತ್ತದೆ. ಸೂರ್ಯನಿಗೆ ಇದು ಪ್ರಶ್ನೆಯಾಗಿ ಕಾಡುತ್ತದೆ.
ಮಾರ್ಕೆಟ್ ನಲ್ಲಿ ವಾಸಿಸುವ ಜನರ ಬದುಕು, ಬವಣೆ, ಅನಾಥ ಹುಡುಗರ ಕಳ್ಳತನದ ಕೈಚಳಕ , ಅದರಲ್ಲೊಂದು ಪ್ರೀತಿಯ ಸಂಚಲನ, ಹೆಲ್ತ್ ಇನ್ಸೂರೆನ್ಸ್ ನೆಪದಲ್ಲಿ ವಂಚನೆ ಹೀಗೆ ಒಂದಷ್ಟು ಅಂಶಗಳೊಂದಿಗೆ ನಿರ್ದೇಶಕರು ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ಚಿತ್ರದಲ್ಲಿ ನಿರ್ಮಾಪಕರು ಮಾಡಿರುವ ಖರ್ಚು ತೆರೆಯ ಮೇಲೆ ಕಾಣಿಸುತ್ತದೆ. ಸಂಗೀತ, ಹಿನ್ನೆಲೆ ಸಂಗೀತ ಚಿತ್ರಕಥೆಗನುಗುಣವಾಗಿದೆ.
ಛಾಯಾಗ್ರಹರ ಕೈ ಚಳಕ ಉತ್ತಮವಾಗಿದೆ. ನಾಯಕನಾಗಿ ಚಂದನ್ ತಮ್ಮ ಪಾತ್ರಕ್ಕೆ ಜೀವ ತುಂಬುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ನಾಯಕಿಯಾಗಿ ಅನುಷಾ ಕೃಷ್ಣ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಎಂದಿನಂತೆ ಶೋಭರಾಜ್ ತಮ್ಮ ಗತ್ತಿನ ಮಾತುಗಳಿಂದಲೇ ಗಮನ ಸೆಳೆದಿದ್ದಾರೆ. ಹಿರಿಯ ಕಲಾವಿದರಾದ ಮುಖ್ಯಮಂತ್ರಿ ಚಂದ್ರು , ಗಿರಿಜಾ ಲೋಕೇಶ್ ಸೇರಿದಂತೆ ಎಲ್ಲಾ ಕಲಾವಿದರು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಮರಂಜನೆ, ಆಕ್ಷನ್ ಬಯಸುವವರಿಗೆ ಖದೀಮ ನಿಜಕ್ಕೂ ಖುಷಿ ಕೊಡುತ್ತದೆ. ವಿತರಕ ವೆಂಕಟ್ ಗೌಡ ಅವರ ಸಾರಥ್ಯದಲ್ಲಿ ಈ ಚಿತ್ರ ರಾಜ್ಯಾದ್ಯಂತ. ಬಿಡುಗಡೆಯಾಗಿದೆ.