ಕನ್ನಡಕ್ಕೊಬ್ಬ ಚಾಕಲೇಟ್ ಹೀರೊ ಸಿಕ್ಕಂತಾಯಿತು!
ಹೀಗೆನ್ನಿಸುವುದು ಒಲವೇ ವಿಸ್ಮಯ ಚಿತ್ರ ನೋಡಿದಾಗ. ನಿಜ, ಹಿರಿಯ ಖಳನಟ ಕೀರ್ತಿರಾಜ್ ಅವರ ಪುತ್ರ ಧರ್ಮ ಕೀರ್ತಿರಾಜ್ ಇಡೀ ಚಿತ್ರದಲ್ಲಿ ಥೇಟ್ ಬಾಲಿವುಡ್ ಹೀರೊ ರಣಬೀರ್ ಕಪೂರ್ ಥರ ಕಾಡುತ್ತಾರೆ. ಕುಣಿಯುತ್ತಾರೆ. ಹೆದರಿಕೆ ಬಿಟ್ಟು ನಟಿಸುತ್ತಾರೆ. ನಿರೀಕ್ಷೆಗೂ ಮೀರಿ ನಟಿಸಿ, ಅಚ್ಚರಿ ಮೂಡಿಸುತ್ತಾರೆ.
ನಿರ್ದೇಶಕ ಟಿ.ಎನ್.ನಾಗೇಶ್ ಗೆದ್ದಿರುವುದೇ ಅಲ್ಲಿ. ಒಂದು ಹಂತದ ವರೆಗೆ ಚಿತ್ರ ನಿಧಾನವಾಗಿ ಸಾಗಿದರೂ ದ್ವಿತಿಯಾರ್ಧದ ನಂತರ ಮತ್ತೊಂದು ಮುಂಗಾರು ಮಳೆ ಚಿತ್ರ ನೋಡಿದಷ್ಟು ಖುಷಿಯಾಗುತ್ತದೆ. ಆ ಹಸಿರ ಕಾಡುಗಳ ಮಧ್ಯೆ ನಡೆಯುವ ಪ್ರೇಮಕತೆ. ನವಿಲ ನರ್ತನದಂತೆ ಕಾಣುವ ಕಾವ್ಯ ಲಹರಿ, ವೀರ ಸಮರ್ಥ್ ಅವರ ಸಮರ್ಥ ಸಂಗೀತ ನಿರ್ದೇಶನ, ಬಳುಕುವ ಬಳ್ಳಿಯಂತಿರುವ ನಾಯಕಿ-ಪ್ರತಿಭಾರಾಣಿ, ಪೋಷಕ ಪಾತ್ರಕ್ಕೆ ಪವರ್ ನೀಡುವ ಅನಂತನಾಗ್-ಸುಧಾ ಬೆಳವಾಡಿ ಹಾಗೂ ತಂಡ, ಹಾಸ್ಯಕ್ಕೆ ಒತ್ತು ನೀಡುವ ಕುರಿ ಪ್ರತಾಪ್, ರಾಜು ತಾಳಿಕೋಟೆ, ಮಿತ್ರಾ ಹಾಗೂ ಮಿತ್ರರು...
ಹೀಗೆ ಇಡೀ ಚಿತ್ರ ನಿಜಕ್ಕೂ ಒಲವೇ ವಿಸ್ಮಯಾ. ಇನ್ನೊಂದು ಅರ್ಥದಲ್ಲಿ ಓ-ಲವ್ವೇ ವಿಸ್ಮಯ!!
ಪ್ರೀತಿಗೆ ಸಂಬಂಧಿಸಿದ ಕತೆಗಳು ಕನ್ನಡದಲ್ಲಿ ಎಷ್ಟೋ ಬಂದಿವೆ, ಬರುತ್ತಿವೆ. ಆದರೆ, ಒಲವೇ ವಿಸ್ಮಯ ಎಲ್ಲಕ್ಕಿಂತ ಭಿನ್ನ; ಎಕೆಂದರೆ, ನಿರ್ದೇಶಕರ ಕಲ್ಪನೆಯೇ ವಿಭಿನ್ನ. ಇಡೀ ಚಿತ್ರವನ್ನು ನೋಡಿಸಿಕೊಂಡು ಹೋಗುವಂತೆ ಮಾಡಿದ್ದಾರೆ ನಾಗೇಶ್.
ಚಿತ್ರಕತೆಯಲ್ಲಿ ಹೊಸತನವಿದೆ. ಬಸವರಾಜ್ ಅವರ ಸಂಭಾಷಣೆಯಲ್ಲಿ ಹೊಸ ಹೊಸ ಪದಪುಂಜವಿದೆ. ವೀರಸಮರ್ಥ್ ಸಂಗೀತದಲ್ಲಿ ಎರಡು ಹಾಡುಗಳು ನಾದಸುರಭಿ. ಛಾಯಾಗ್ರಹಣ ರತ್ನಮಂಜರಿ.
ಅನಂತನಾಗ್ ಪಾತ್ರದ ಬಗ್ಗೆ ಎರಡು ಮಾತಿಲ್ಲ. ಅವರ ನಟನೆಯಲ್ಲಿ ಗುಲಗಂಜಿಯಷ್ಟೂ ದೋಷವಿಲ್ಲ. ಚಿತ್ರರಂಗದ ಅಜ್ಜಿಯಂತಿರುವ ಲಕ್ಷ್ಮಿ ದೇವಿಯವರ ಗ್ಲ್ಯಾಮರಸ್ ಪಾತ್ರ ನಿಜಕ್ಕೂ ವಿಶೇಷತೆಯಿಂದ ಕೂಡಿದೆ.
ಒಟ್ಟಾರೆ ಒಲವೇ ವಿಸ್ಮಯ ಪ್ರೇಮಿಗಳ ಪಾಲಿನ ಲಾಲ್ ಬಾಗ್. ಪ್ರೀತಿಗೆ ಹೊಸ ಅರ್ಥ ಕೊಡುವ ತಾಜ್ಮಹಲ್. ಒಂಟಿಯಾಗಿ ಸಿನಿಮಾ ನೋಡುವ ಬದಲು ಸಂಗಾತಿಯೊಂದಿಗೆ ಹೋದರೆ ಹೊಸ ಅನುಭವ ಆಗುತ್ತದೆ. ಎಂಥ ಅನುಭವ ಎಂಬ ಪ್ರಶ್ನೆಗೆ ಉತ್ತರ-ಒಲವೇ ವಿಸ್ಮಯಾ...