ಚಿತ್ರ: ನಾನು ಕರುಣಾಕರ
ನಿರ್ದೇಶನ; ಆರ್ಯನ್ ತೇಜಸ್
ನಿರ್ಮಾಣ: ನಮನ ನಾರಾಯಣ್, ಸಂತೋಷ್, ವೈಭವ್ ಸುರೇಶ್
ಛಾಯಾಗ್ರಹಣ: ವಿಜಯ್ ರಾಮ್
ಸಂಗೀತ: ರೋಹಿತ್ ಸೋವರ್
ತಾರಾಗಣ: ಆರ್ಯನ್ ತೇಜಸ್,ರಾಧಾ ಭಗವತಿ, ಭವಿಷ್ ಎಸ್.ಗೌಡ, ಕರಿಸುಬ್ಬು, ಎಂ.ಕೆ.ಮಠ, ಅಪೂರ್ವ ಹಾಗೂ ಇತರರು.
ಒಬ್ಬ ತಂದೆ ಮಗನಿಗಾಗಿ ಏನೇನೆಲ್ಲ ಮಾಡುವ ಹಂತಕ್ಕೆ ಹೋಗುತ್ತಾನೆ, ಪತಿ ಪತ್ನಿಯ ಸಂಬಂಧ ಹೇಗಿರಬೇಕು ಎಂಬುದನ್ನು ನಾನು ಕರುಣಾಕರ ಎಂಬ ಫ್ಯಾಮಿಲಿ ಎಂಟರ್ ಟೈನರ್ ಚಿತ್ರದ ಮೂಲಕ ಹೇಳಿದ್ದಾರೆ ನಿರ್ದೇಶಕ ಆರ್ಯನ್ ತೇಜಸ್. ಕೌಟುಂಬಿಕ ಸಂಬಂಧಗಳ ಮಹತ್ವವನ್ನು ತೆರೆದಿಡುವ ವಿಭಿನ್ನ ಕಥಾನಕ ಒಳಗೊಂಡ ಈ ಚಿತ್ರಕ್ಕಾಗಿ ನಿರ್ದೇಶಕ ಆರ್ಯನ್ ತೇಜಸ್ ಆಯ್ದುಕೊಂಡಿರುವ ಕಥೆಯೇ ಪರಿಣಾಮಕಾರಿಯಾಗಿದೆ.ನಿರೂಪಣೆಯೂ ವೀಕ್ಷಕರ ಮನ ಮುಟ್ಟುವಂತಿದೆ.
ಒಬ್ಬ ತಂದೆ ಹಾಗೂ ಮಗನ ನಡುವಿನ ಅವಿನಾಭಾವ ಸಂಬಂಧದ ಸುತ್ತ ಸಾಗುವ ಈ ಕಥೆಯಲ್ಲಿ ಆರ್ಯನ್ ತೇಜಸ್ ಜವಾಬ್ದಾರಿಯುತ ತಂದೆ ಕರುಣಾಕರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ ಚಿತ್ರದ ನಿರ್ದೇಶನ ಕೂಡ ಮಾಡಿದ್ದಾರೆ. ನಮ್ಮ ಸಮಾಜದ ಪ್ರತಿ ಕುಟುಂಬಕ್ಕೂ ಹತ್ತಿರವಾಗುವಂಥ ಕಥಾಹಂದರ ಈ ಚಿತ್ರದಲ್ಲಿದ್ದು, ಚಿತ್ರ ನೋಡುತ್ತಿರುವ ಪ್ರೇಕ್ಷಕ ಕಥೆಯ ಪಾತ್ರಗಳಲ್ಲಿ ತನ್ನನ್ನೇ ಕಾಣುತ್ತಾ ಹೋಗುತ್ತಾನೆ. ಒಬ್ಬ ತಂದೆ, ಪತ್ನಿ ಎಲ್ಲರೂ ಆ ಪಾತ್ರಗಳಲ್ಲಿ ತಮ್ಮನ್ನು ಕಲ್ಪಿಸಿಕೊಳ್ಳುತ್ತಾ ಹೋಗುತ್ತಾರೆ, ಹೀಗೆ ಚಿತ್ರ ನೋಡುತ್ತಿರುವ ಪ್ರೇಕ್ಷಕರನ್ನು ಕಾಡುತ್ತಾ ಹಿಡಿದಿಟ್ಟುಕೊಳ್ಳುತ್ತದೆ. ತಂದೆ ಮಗನ ನಡುವಿನ ಬಾಂಧವ್ಯ ಹಾಗೂ ಗಂಡ ಹೆಂಡತಿಯ ಸಂಬಂಧದ ಸುತ್ತ ನಡೆಯೋ ಘಟನೆಗಳೇ ಈ ಚಿತ್ರದ ಹೈಲೈಟ್. ನಾಯಕ ಕರುಣಾಕರನಾಗಿ ಆರ್ಯನ್ ತೇಜಸ್ ಹಾಗೂ ಪತ್ನಿಯಾಗಿ ರಾಧಾ ಭಗವತಿ ಇಬ್ಬರೂ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಇಂಥ ಕರುಣಾಕರ ಪ್ರತಿಯೊಬ್ಬರ ಮನೆಯಲ್ಲೂ ಇದ್ದಾನೆ. ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕನಾಗಿದ್ದ ವ್ಯಕ್ತಿಯೊಬ್ಬ ತನ್ನ ಕುಟುಂಬವನ್ನು ಮುನ್ನಡೆಸಿಕೊಂಡು ಹೋಗಲು ಎಷ್ಟೆಲ್ಲ ಕಷ್ಟ ಪಡುತ್ತಾನೆ, ಆತ ಏನೆಲ್ಲ ಮಾಡುತ್ತ ಹೋಗುತ್ತಾನೆ ಎಂಬುದನ್ನು ನಾನು ಕರುಣಾಕರ ಚಿತ್ರದಲ್ಲಿ ಪರಿಣಾಮಕಾರಿ ದೃಶ್ಯಗಳೊಂದಿಗೆ ತೋರಿಸಲಾಗಿದೆ.